ಮನಸೆಳೆದ ಕೆ. ಮೋಹನ್ ನಿರ್ದೇಶನದ ವೀರ ವೃಷಸೇನ ಯಕ್ಷಗಾನ ಪ್ರದರ್ಶನ
ಲೇಖಕರು : ಕೋಟ ಸುದರ್ಶನ ಉರಾಳ
ಮ೦ಗಳವಾರ, ಮಾರ್ಚ್ 29 , 2016
|
ಮಾರ್ಚ್ 29, 2016
|
ಮನಸೆಳೆದ ಕೆ. ಮೋಹನ್ ನಿರ್ದೇಶನದ ವೀರ ವೃಷಸೇನ ಯಕ್ಷಗಾನ ಪ್ರದರ್ಶನ
ಬೆಂಗಳೂರು :
`` ಕೆ. ಮೋಹನ್ರನ್ನು 35 ವರ್ಷದಿಂದ ಹತ್ತಿರದಿಂದ ನೋಡಿದ್ದೇನೆ. ಅವರ ಸಂಘಟನೆಯ ಯಕ್ಷದೇಗುಲದ ಮೂಲಕ ನೂರಾರು ವಿದ್ಯಾರ್ಥಿಗಳಿಗೆ ಯಕ್ಷಗಾನದ ಬಗ್ಗೆ ಅಭಿರುಚಿ ಮೂಡಿಸುತ್ತಿದ್ದಾರೆ. ಕೇವಲ ಪುರಾಣ ಪ್ರಸಂಗ ಸೀಮಿತವಲ್ಲದೇ ಏಡ್ಸ್, ಸ್ವಚ್ಛ ಭಾರತ್ ಹೀಗೆ ಇತರ ಸಾಮಾಜಿಕ ವಿಚಾರದ ಬಗ್ಗೆಯೂ ಯಕ್ಷಗಾನದ ಮೂಲಕ ಜನರಿಗೆ ಅರಿವು ಮೂಡಿಸಿದ್ದಾರೆ. ದೇಶ-ವಿದೇಶಗಳಲ್ಲೂ ಕಾರ್ಯಕ್ರಮ ನೀಡಿದ ಮೋಹನರು ಸ್ವಂತ ಪರಿಶ್ರಮದಿಂದ ಈ ಕ್ಷೇತ್ರದಲ್ಲಿ ದುಡಿದು ಇವರೊಬ್ಬರು ಚೈತನ್ಯದ ಚಿಲುಮೆಯೆಂದರೆ ತಪ್ಪಾಗದು. ಈ ಒಂದು ಸಂಘಟನೆ ಮೂಲಕ ಜನರಲ್ಲಿ ಕಲೆಯ ಅಭಿರುಚಿ ಮೂಡಿಸುತ್ತಿರುವುದು ಸ್ತುತ್ಯಾರ್ಹ`` ಎಂದು ಮುಖ್ಯ ಅಭ್ಯಾಗತರಾಗಿ ಭಾಗವಹಿಸಿದ ಯಕ್ಷಗಾನ ವಿದ್ವಾಂಸರಾದ ಡಾ|. ಆನಂದರಾಮ ಉಪಾಧ್ಯರು ಅಭಿಪ್ರಾಯಪಟ್ಟರು. ಮಾರ್ಚ್ 27 ರಂದು ಕೇಂದ್ರ ಸಂಸ್ಕೃತಿ ಇಲಾಖೆಯ ಸಹಕಾರದಿಂದ ಕೆ. ಮೋಹನ್ರು “ವೀರ ವೃಷಸೇನ” ಪ್ರಸಂಗದ ನಿರ್ದೇಶನದ ಯಕ್ಷಗಾನ ಪ್ರದರ್ಶನವು ಬೆಂಗಳೂರಿನ ಜೆ.ಸಿ.ರಸ್ತೆಯ ನಯನ ಸಭಾಭವನದಲ್ಲಿ ನಡೆಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ರಿಜಿಸ್ಟ್ರಾರ್ ಆದ ಶ್ರೀಮತಿ ಮೈಥಿಲಿಯವರು ಯಕ್ಷಗಾನದ ರಂಗ ಸ್ಥಳದ ದಿವುಟಿಕೆಗೆ ದೀಪ ಹಚ್ಚುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಮುಖ್ಯ ಅಭ್ಯಾಗತರಾಗಿ ಭಾಗವಹಿಸಿದ ಯಕ್ಷಗಾನ ವಿದ್ವಾಂಸರಾದ ಡಾ|. ಆನಂದರಾಮ ಉಪಾಧ್ಯರು ಯಕ್ಷಗಾನ ಕ್ಷೇತ್ರಕ್ಕೆ ಡಾ| ಶಿವರಾಮ ಕಾರಂತರ ಪ್ರವೇಶದಿಂದ ಮತ್ತಷ್ಟು ಪ್ರಚಲಿತವಾಯಿತು. ಹಳ್ಳಿಗರಿಗೆ ಸೀಮಿತವಾಗಿದ್ದ ಯಕ್ಷಗಾನ ಕಲೆ ಇಂದು ನಗರ ಪ್ರದೇಶ, ದೇಶ-ವಿದೇಶದಲ್ಲೂ ಪ್ರಸಿದ್ಧಿ ಪಡೆದಿದೆ. ೨೫-೩೦ ವರ್ಷದ ಹಿಂದೆ ಕೆ. ಮೋಹನ್ರ ಗದಾಯುದ್ಧದ ಕೌರವ ಅದ್ಭುತವಾಗಿತ್ತು. ಇವರು ನಿರ್ದೇಶಿಸಿದ ಇಳೆಯಣ್ಣನ ಕತೆ ಯಕ್ಷಗಾನ ಸಾವಿರಕ್ಕೂ ಮಿಕ್ಕಿ ಪ್ರದರ್ಶನ ಕಂಡಿದೆ. ಇಂದು ಹವ್ಯಾಸಿ ಕಲಾವಿದರು ಯಕ್ಷಗಾನದ ನಿರ್ಣಾಯಕರಾಗಿರುತ್ತಾರೆ. ಈ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಶ್ರಮಿಸುತ್ತಾರೆ.
ಮಾಜಿ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಸದಸ್ಯರಾದ ಮೋಹನರು ನಗರ ಪ್ರದೇಶಗಳಲ್ಲಿ ಸಂಘಟನೆ-ಕಲಿಕೆ-ಪ್ರದರ್ಶನಗಳಿಗೆ ಕಾರ್ಪೋರೇಟ್ ರೂಪ ಕೊಟ್ಟವರಾಗಿದ್ದಾರೆ. ಅಲ್ಲದೇ ಬಿ.ಬಿ.ಕಾರಂತ್ ನಿರ್ದೇಶನದ ಕೆಲವು ನಾಟಕಗಳಲ್ಲಿ ಪಾತ್ರ ನಿರ್ವಹಿಸಿ ರಂಗಭೂಮಿಯ ಅನುಭವ, ಚಲನಚಿತ್ರ, ಕಿರುತೆರೆಯವರೊಂದಿಗಿನ ಒಡನಾಟದಿಂದ ಚಿಂತನಾತ್ಮಕ ವಿಷಯಗಳನ್ನೂ ಪಡೆದಿರುತ್ತಾರೆ. ಇಂದು ಇವರ ನಿರ್ದೇಶನದ ವೀರ ವೃಷಸೇನ ಯಕ್ಷಗಾನ ಯಶಸ್ವಿಯಾಗಲಿ ಎಂದು ಹಾರೈಸಿದರು.
ಯಕ್ಷಗಾನ ಪ್ರೋತ್ಸಾಹಕರು ಮತ್ತು ಪ್ರಸಂಗಕರ್ತರಾದ ಮಣೂರು ವಾಸುದೇವ ಮಯ್ಯರು ಮಾತನಾಡಿ ಕಳೆದ ೩೫ ವರ್ಷದಿಂದ ಕೆ.ಮೋಹನ್ ನಿರ್ದೇಶನದ ಯಕ್ಷದೇಗುಲ ತಂಡ ಹೀಗೆಯೇ ಸದಾ ಯಶಸ್ವಿಯಾಗಿ ನಡೆಯಲಿ ಹಾಗೆ ಇಂದಿನ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಹಾರೈಸಿದರು.
ಕೆ. ಮೋಹನರು ಸ್ವಾಗತಿಸಿದರು, ಉಪನ್ಯಾಸಕ ಕಲಾವಿದ ಸುಜಯೀಂದ್ರ ಹಂದೆಯವರು ಸೊಗಸಾಗಿ ಕಾರ್ಯಕ್ರಮವನ್ನು ನಿರೂಪಿಸಿದರು. ನಂತರ ‘ವೀರ ವೃಷಸೇನ’ ಯಕ್ಷಗಾನ ಪ್ರದರ್ಶನದಲ್ಲಿ ಭಾಗವತರಾಗಿ ಸುಜಯೀಂದ್ರ ಹಂದೆ ಮತ್ತು ಲಂಬೋದರ ಹೆಗಡೆ ಮದ್ದಲೆಯಲ್ಲಿ, ಗಣಪತಿ ಭಟ್ ಹಾಗೂ ಮಾಧವ ಮಣೂರು ಚಂಡೆ ವಾದನದಲ್ಲಿ ಕಟ್ಕೇರಿ ಮಂಜುನಾಥ ಭಟ್ರು ಸಹಕರಿಸಿದರು. ಹಾಗೆ ಮುಮ್ಮೇಳದಲ್ಲಿ ಕೌರವನಾಗಿ ಕೆ. ಮೋಹನ್ರ ಮಗಳಾದ ಪ್ರಿಯಾಂಕ ಕೆ. ಮೋಹನ್ ಅರ್ಜುನನಾಗಿ, ಕೆ. ಮೋಹನ್ರ ಇನ್ನೊಬ್ಬಳು ಮಗಳಾದ ಡಾ. ಪ್ರೀತಿ ಕೆ. ಮೋಹನ್, ವೃಷಸೇನನಾಗಿ ನವೀನ್ ಕೋಟ, ಸೋಮಪ್ರಭೆಯಾಗಿ ಮನೋಜ್ ಭಟ್, ಭೀಮನಾಗಿ ಶಶಾಂಕ ಕಾಶಿ ಮತ್ತು ಕೃಷ್ಣನಾಗಿ ಪ್ರದೀಪ್ ಮಧ್ಯಸ್ಥರು ನಿರ್ವಹಿಸಿದರು. ರಂಗದ ಹಿಂದೆ ಕೋಟ ಸುದರ್ಶನ ಉರಾಳ, ನರಸಿಂಹ ತುಂಗ, ಉದಯಬೋವಿ, ಪ್ರಕಾಶ್ ಉಳ್ಳೂರ, ಚಿಂತನ್, ಸುಷ್ಮಾ, ದೀಪಕ್ ಮತ್ತು ರಾಘವೇಂದ್ರರವರು ಸಹಕರಿಸಿದರು.
|
|
|